Please enable javascript.BBC Russian" type="text/javascript">
Svoboda | Graniru | BBC Russia | Golosameriki | Facebook

ಸಿಇಟಿ ಮೀಸಲಿಗಾಗಿ ಅಂಗವೈಕಲ್ಯ 'ಹೆಚ್ಚಿಸಿ'ಕೊಂಡ ಅಭ್ಯರ್ಥಿಗಳು: ವೈದ್ಯರ ತಪಾಸಣೆ ಬಳಿಕ ಬಯಲು!

Curated byಸೌಮ್ಯಶ್ರೀ ಮಾರ್ನಾಡ್ | Vijaya Karnataka 24 Jun 2024, 7:52 am
Subscribe

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ವೈದ್ಯರ ತಂಡ ನಡೆಸಿದ ತಪಾಸಣೆಯಿಂದಾಗಿ 320 ಅಭ್ಯರ್ಥಿಗಳ ಅಸಲೀತನ ಬಯಲಾಗಿದೆ. ಕೆಇಎ ನಿಗದಿಪಡಿಸಿದ ಅಂಗವೈಕಲ್ಯದ ಪ್ರಮಾಣಕ್ಕಿಂತ ಕಡಿಮೆ ಅಂಗವೈಕಲ್ಯ ಹೊಂದಿದ್ದಾರೆ. ಹೀಗಾಗಿ ಅರ್ಜಿ ಸಲ್ಲಿಸಿದ 798 ಅಭ್ಯರ್ಥಿಗಳ ಪೈಕಿ 320 ಅಭ್ಯರ್ಥಿಗಳ ಅರ್ಜಿ ತಿರಸ್ಕಾರಗೊಂಡಿದೆ. ಇವರಿಗೆ ಅಂಗವಿಕಲ ಕೋಟಾದಡಿ ಸೀಟ್ ನೀಡಲು ಸಾಧ್ಯವಿಲ್ಲ ಎಂದಿದೆ.

ಹೈಲೈಟ್ಸ್‌:

  • ಶೇ.40ರ ಷ್ಟು ಅಭ್ಯರ್ಥಿಗಳ 'ಕೋಟಾ ಸೀಟು' ಅನರ್ಹಗೊಳಿಸಿದ ಕೆಇಎ
  • ವೈದ್ಯಕೀಯ ತಪಾಸಣೆಯಲ್ಲಿ 320 ಅಭ್ಯರ್ಥಿಗಳ ಅಸಲೀತನ ಬಯಲು
  • ಕೆಇಎ ಇತ್ತೀಚೆಗೆ ಮೂರು ದಿನ ನುರಿತ ತಜ್ಞ ವೈದ್ಯರ ತಂಡವನ್ನು ರಚಿಸಿ ಅಭ್ಯರ್ಥಿಗಳನ್ನು ತಪಾಸಣೆಗೆ ಒಳಪಡಿಸಿದಾಗ ನೈಜತೆ ದೃಢಪಟ್ಟಿದೆ.
Students
ದೇವರಾಜ್‌ ಕನಕಪುರ
ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) 2024ರಲ್ಲಿ ಅಂಗವಿಕಲ ಕೋಟಾದಡಿ ಮೀಸಲು ಪಡೆಯಲು ಅಂಗವೈಕಲ್ಯ ಪ್ರಮಾಣ ಕಡಿಮೆ ಇದ್ದರೂ ಹೆಚ್ಚು ಎಂದು ತೋರಿಸಿ ತಪಾಸಣೆ ವೇಳೆ ಸಿಕ್ಕಿ ಬಿದ್ದು ನೂರಾರು ಅಭ್ಯರ್ಥಿಗಳು ಮೀಸಲು ಅರ್ಹತೆ ಕಳೆದುಕೊಂಡಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಸಿಇಟಿಯಲ್ಲಿ 798 ಅಭ್ಯರ್ಥಿಗಳು ಅಂಗವಿಕಲ ಮೀಸಲು ಕೋಟಾದಡಿ ಸೀಟು ಪಡೆಯಲು ಅರ್ಜಿ ಸಲ್ಲಿಸಿದ್ದರು. ಕೆಇಎ ನಿಗದಿ ಮಾಡಿರುವ ಮಾನದಂಡದ ಪ್ರಕಾರ ಒಬ್ಬ ವ್ಯಕ್ತಿ ಅಂಗವಿಕಲತೆ ಕೋಟಾದಡಿ ಸೀಟು ಕ್ಲೇಮ್‌ ಮಾಡಲು ಶೇ.40ಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರಬೇಕು. ಆದರೆ, ಈ 789 ಅಭ್ಯರ್ಥಿಗಳ ಪೈಕಿ ಶೇ.40ರಷ್ಟು ಅಂದರೆ, ಅಂದಾಜು 320
ಅಭ್ಯರ್ಥಿಗಳು ನಿಗದಿಪಡಿಸಿರುವ ಪ್ರಮಾಣಕ್ಕಿಂತ ಕಡಿಮೆ ಅಂಗವೈಕಲ್ಯತೆ ಹೊಂದಿದ್ದಾರೆ. ಇದನ್ನು ಪರಿಶೀಲಿಸುವುದಕ್ಕಾಗಿಯೇ ಕೆಇಎ ಇತ್ತೀಚೆಗೆ ಮೂರು ದಿನ ನುರಿತ ತಜ್ಞ ವೈದ್ಯರ ತಂಡವನ್ನು ರಚಿಸಿ ಅಭ್ಯರ್ಥಿಗಳನ್ನು ತಪಾಸಣೆಗೆ ಒಳಪಡಿಸಿದಾಗ ನೈಜತೆ ದೃಢಪಟ್ಟಿದೆ.

ನೀಟ್ ಪರೀಕ್ಷೆ ಬಹುದೊಡ್ಡ ಹಗರಣ: ನಿಷ್ಪಕ್ಷಪಾತ ತನಿಖೆಗೆ ಮೀನಾಮೇಷ ಏಕೆ? ಸಚಿವ ಶರಣಪ್ರಕಾಶ್ ಪಾಟೀಲ್

ಲೋಕೋಮೋಟಾರ್‌ ಡಿಸೆಬಲಿಟಿ (ಕೈ-ಕಾಲು ಚಲನೆಯಲ್ಲಿಊನತೆ), ಅಂಧತೆ ಮತ್ತು ಶ್ರವಣ ದೋಷ ಈ ಮೂರು ಅಂಗವಿಕಲತೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳು ಕಡಿಮೆ ವೈಕಲ್ಯತೆ ಇದ್ದರೂ ಹೆಚ್ಚಿದೆ ಎಂದು ಅಂಗವಿಕಲ ಮೀಸಲುಯನ್ನು ಕೋರಿದ್ದರು. ಆದರೆ, ಇದಕ್ಕಾಗಿಯೇ ಪ್ರತ್ಯೇಕ ವೈದ್ಯರ ತಂಡ ಕೆಇಎ ಕಚೇರಿಗೆ ಆಗಮಿಸಿ ಪರಿಶೀಲನೆಗೆ ಒಳಪಡಿಸಿದಾಗ ನಿಗದಿಪಡಿಸಿದಕ್ಕಿಂತ ಕಡಿಮೆ ಅಂದರೆ, ಶೇ.30ರೊಳಗೆ ವಿಕಲತೆ ಇದ್ದುದರಿಂದ ಅವರಿಗೆ ಮೀಸಲು ಅನ್ವಯಿಸುವುದಿಲ್ಲ ಎಂದು ಕೆಇಎ ತಿಳಿಸಿದೆ.

ಅಂಗವಿಕಲತೆ ಮೀಸಲು ಪಡೆಯುವ ಉದ್ದೇಶದಿಂದ ಅಭ್ಯರ್ಥಿಗಳು ತಮಗೆ ಅನುಕೂಲವಾಗಿರುವ ವೈದ್ಯರಿಂದ ಮೀಸಲು ಪ್ರಮಾಣ ಪತ್ರವನ್ನು ಪಡೆದುಕೊಂಡು ಅರ್ಜಿ ಸಲ್ಲಿಸಿರುತ್ತಾರೆ. ಆದರೆ, ತೀವ್ರ ತಪಾಸಣೆಗೆ ಒಳಪಡಿಸಿದಾಗಲೂ ಇಷ್ಟೇ ಪ್ರಮಾಣ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವೈಕಲ್ಯತೆ ಕಾಣಬೇಕಾಗಿರುತ್ತದೆ. ಆದರೆ, ತಪಾಸಣೆಗೆ ಒಳಪಡಿಸಿದಾಗ ಕೆಇಎ ನಿಗದಿಪಡಿಸಿರುವ ಶೇ.40ಕ್ಕಿಂತ ಕಡಿಮೆ ವೈಕಲ್ಯತೆ ಇರುವುದು ತಿಳಿದು ಬಂದಿದೆ.


ಮೀಸಲು ಏಕೆ?

ಸಾಮಾನ್ಯವಾಗಿ ಅಂಗವಿಕಲತೆ ಮೀಸಲಿಗೆ ಸೀಟುಗಳು ಸುಲಭವಾಗಿ ಸಿಗುತ್ತವೆ. ಸಾಮಾನ್ಯ ಅಭ್ಯರ್ಥಿಗಳಿಗಿಂತ ಮೀಸಲು ಅಡಿ ಸೀಟು ಪಡೆಯುವುದು ಸುಲಭ. ಅಲ್ಲದೆ, ಟಾಪ್‌ ಕಾಲೇಜುಗಳಲ್ಲಿ ಸೀಟುಗಳು ದೊರೆಯುವ ಸಾಧ್ಯತೆಯೇ ಹೆಚ್ಚು. ಇದಕ್ಕಾಗಿಯೇ ಈ ರೀತಿ ಅಂಗವಿಕಲತೆಯ ಪ್ರಮಾಣ ಹೆಚ್ಚಿದೆ ಎಂದು ಅರ್ಜಿ ಸಲ್ಲಿಸುತ್ತಾರೆ. ಕಳೆದ 5 ವರ್ಷದ ಹಿಂದೆ ಇದೇ ರೀತಿ ವೈದ್ಯರೊಬ್ಬರ ಮಗಳೊಬ್ಬಳು ಶ್ರವಣದೋಷವೆಂದು ಅಂಗವಿಕಲ ಮೀಸಲು ಅರ್ಜಿ ಸಲ್ಲಿಸಿದ್ದರು. ತಂದೆ ವೈದ್ಯರಾಗಿದ್ದ ಕಾರಣ ತನ್ನ ಸ್ನೇಹಿತ ವೈದ್ಯರಿಗೆ ಹೇಳಿ ಕೆಇಎ ದೈಹಿಕ ತಪಾಸಣೆಯಲ್ಲೂ ಪಾಸ್‌ ಮಾಡಿಸಿ ಮಗಳಿಗೆ ಸೀಟು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಆನಂತರ ದೂರುದಾರದಿಂದ ಇದು ಅಕ್ರಮ ಎಂದು ತಿಳಿದಾಗ ಕೆಇಎ ಸೀಟು ಹಿಂಪಡೆಯಿತು.

ಅಂಗವಿಕಲ ಕೋಟಾದಡಿ ಮೀಸಲು ಪಡೆಯುವ ಉದ್ದೇಶದಿಂದ ಮೀಸಲು ಕ್ಲೇಮ್‌ ಮಾಡಿಕೊಳ್ಳುತ್ತಾರೆ. ಆದರೆ, ಇವರ ಅಂಗವಿಕಲತೆಯನ್ನು ಪರಿಶೀಲಿಸಿದಾಗ ನಿಗದಿತ ಪ್ರಮಾಣದಲ್ಲಿಅಂಗವೈಕಲ್ಯತೆ ಇರದೇ ಇರುವುದರಿಂದ ಈ ಕೋಟಾದಡಿ ಸೀಟು ನೀಡಲು ಸಾಧ್ಯವಿಲ್ಲ ಎಂದು ಎಚ್‌.ಪ್ರಸನ್ನ, ಕಾರ್ಯಕಾರಿ ನಿರ್ವಾಹಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದ್ದಾರೆ.
ಸೌಮ್ಯಶ್ರೀ ಮಾರ್ನಾಡ್
ಲೇಖಕರ ಬಗ್ಗೆ
ಸೌಮ್ಯಶ್ರೀ ಮಾರ್ನಾಡ್
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ನಾಗರಿಕರ ಸಮಸ್ಯೆಗಳು, ಬೆಂಗಳೂರು ಸ್ಥಳೀಯ ಆಡಳಿತದ ಕುಂದುಕೊರತೆಗಳ ವರದಿ, ವಿಶೇಷ ವ್ಯಕ್ತಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ರಂಗಭೂಮಿ ಹಾಗೂ ಯಕ್ಷಗಾನ ಇವರ ಇತರ ಆಸಕ್ತಿಕರ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ