Please enable javascript.BBC Russian" type="text/javascript">
Svoboda | Graniru | BBC Russia | Golosameriki | Facebook

ಎಚ್‌ಎಸ್‌ಆರ್‌ಪಿ ನೋಂದಣಿಗೆ ನಿರಾಸಕ್ತಿ: ರಾಯಚೂರಲ್ಲಿ ಕೇವಲ ಒಂದೂವರೇ ಲಕ್ಷ ವಾಹನ ನೋಂದಣಿ!

Curated byಸೌಮ್ಯಶ್ರೀ ಮಾರ್ನಾಡ್ | Vijaya Karnataka 25 Jun 2024, 8:06 am
Subscribe

ಕಳೆದ 10 ತಿಂಗಳಿಂದ ವಾಹನಗಳ ನಂಬರ್‌ ಪ್ಲೇಟನ್ನು ಎಚ್‌ಎಸ್‌ಆರ್‌ಪಿಗೆ ಬದಲಾಯಿಸಲು ಸರ್ಕಾರ ಜಾಗೃತಿ ಮೂಡಿಸುತ್ತಾ ಬಂದಿದ್ದರೂ ಜನರಲ್ಲಿ ನಿರ್ಲಕ್ಷ್ಯ ಮುಂದುವರಿದಿದೆ. ರಾಯಚೂರು ಜಿಲ್ಲೆಯಲ್ಲಿಯೂ ನಿರಾಸಕ್ತಿ ತೋರಿಸಿದ್ದು 5,66,793 ವಾಹನಗಳ ಪೈಕಿ ಕೇವಲ 1.43 ಲಕ್ಷ ವಾಹನಗಳು ಮಾತ್ರ ನೋಂದಣಿಯಾಗಿವೆ. ಹೆಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್ ಅಳವಡಿಕೆಯಿಂದ ವಾಹನ ಕಳ್ಳತನದಂತಹ ಸಂದರ್ಭ ಹಾಗೂ ಅಪಘಾತ ಸಮಯಗಳಲ್ಲಿ ಇದು ನೆರವಾಗಲಿದೆ.

ಹೈಲೈಟ್ಸ್‌:

  • ರಾಯಚೂರಲ್ಲಿ ಇದುವರೆಗೆ 1.43 ಲಕ್ಷ ವಾಹನಗಳು ಎಚ್‌ಎಸ್‌ಆರ್‌ಪಿ ನೋಂದಣಿ
  • ನೋಂದಣಿಗೆ ಸೆ.15ರಂದು ಕೊನೆ ದಿನ
  • 4,23,620 ವಾಹನಗಳು ನೋಂದಣಿ ಬಾಕಿ ಇದೆ
HSRP issues
ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು: ರಾಜ್ಯದಲ್ಲಿ 2019ರ ಏ.1ಕ್ಕೂ ಮುಂಚೆ ನೋಂದಣಿಯಾದ ವಾಹನಗಳಿಗೆ ಕಡ್ಡಾಯವಾಗಿ ಎಚ್‌ಎಸ್‌ಆರ್‌ಪಿ (ಹೈ ಸೆಕ್ಯುರಿಟಿ ರಿಜಿಸ್ಪ್ರೇಷನ್‌ ಪ್ಲೇಟ್‌) ಅಳವಡಿಸಿಕೊಳ್ಳದಿದ್ದರೆ 500 ರಿಂದ 1 ಸಾವಿರ ರೂ. ದಂಡ ವಿಧಿಸುವಂತೆ ಸಾರಿಗೆ ಇಲಾಖೆ ಸ್ಪಷ್ಟ ಎಚ್ಚರಿಕೆ ನೀಡಿದ್ದರೂ ಜಿಲ್ಲೆಯಲ್ಲಿ ನಿರೀಕ್ಷಿತ ಗುರಿ ತಲುಪಲಾಗಿಲ್ಲ. 10 ತಿಂಗಳಾದರೂ ಜಿಲ್ಲೆಯಲ್ಲಿ ಕೇವಲ 1.43 ಲಕ್ಷ ವಾಹನಗಳು ಮಾತ್ರ ನೋಂದಣಿ ಮಾಡಿಸಿದ್ದು ನಿರಾಸಕ್ತಿ ಮುಂದುವರಿದಿದೆ. ಇದರಿಂದ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಲೆ ಬಿಸಿ ಹೆಚ್ಚಿದೆ.
ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಎಲ್ಲ ವಾಹನಗಳಿಗೂ ಕಡ್ಡಾಯವಾಗಿ ಎಚ್‌ಎಸ್‌ಆರ್‌ಪಿ ಅಳವಡಿಸುವಂತೆ ಸೂಚನೆ ನೀಡಿ 10 ತಿಂಗಳು ಕಳೆದಿವೆ. ಆದರೆ, ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದ ನಂತರ ನೆರೆ ರಾಜ್ಯಗಳಲ್ಲಿ ಹಳೆಯ ವಾಹನ ಹೊಂದಿದವರು ಹಾಗೂ ಹಳೆಯ ವಾಹನ ಖರೀದಿಸಿದವರು ಇದುವರೆಗೆ ನೋಂದಣಿ ಮಾಡಲು ಮುಂದಾಗುತ್ತಿಲ್ಲ.

ಕಳೆಗಟ್ಟಿದ ಲಿಂಗಸುಗೂರಿನ ನಾರಾಯಣಪುರ ಜಲಾಶಯ : ನೀರಿನ ಮಟ್ಟ ಹೆಚ್ಚಳ

ನೋಂದಣಿ ಫಲಕ ಕಡ್ಡಾಯ:

ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯವು 2001ರಲ್ಲೇ ಎಚ್‌ಎಸ್‌ಆರ್‌ಪಿ ಕುರಿತು ಆದೇಶ ಹೊರಡಿಸಿದೆ. ಇದೀಗ ಆ ಹಳೆ ವಾಹನಗಳ ನೋಂದಣಿ ಫಲಕಗಳನ್ನು ಬದಲಿಸಿ ಕಡ್ಡಾಯವಾಗಿ ಹೊಸ ನಿಯಮದಂತೆ ಸಂಖ್ಯಾ ಫಲಕ ಅಳವಡಿಸಬೇಕು ಎಂದು ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ. ಆದರೆ ರಾಯಚೂರು ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಇಲಾಖೆ ಅಧಿಕಾರಿಗಳು ಕಳೆದ 10 ತಿಂಗಳಿಂದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆ ಮಾಡಲು ಜಾಗೃತಿ ಮೂಡಿಸಿದರೂ ವಾಹನ ಮಾಲೀಕರು ಮುಂದಾಗುತ್ತಿಲ್ಲ.

ಜಿಲ್ಲೆಯಲ್ಲಿ ಒಟ್ಟು 5,66,793 ವಾಹನಗಳಲ್ಲಿ 1,43,173 ವಾಹನಗಳು ಮಾತ್ರ ನೋಂದಣಿಯಾಗಿದ್ದು, 4,23,620 ವಾಹನಗಳು ನೋಂದಣಿ ಬಾಕಿ ಇದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ವಿಕ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಎಚ್‌ಎಸ್‌ಆರ್‌ ಪಿ ಉಪಯೋಗವೇನು?:

ವಾಹನ ಕಳ್ಳತನ ಹಾಗೂ ಅಪಘಾತ ಸಂದರ್ಭ ಹೊಸದಾದ ನಂಬರ್‌ ಪ್ಲೇಟ್‌ ಅಳವಡಿಸಿಕೊಂಡರೆ ಅನುಕೂಲವಾಗಲಿದೆ. ಇವುಗಳನ್ನು ಬದಲಿಸಿ ವಿರೂಪಗೊಳಿಸುವುದು ಸಾಧ್ಯವಿಲ್ಲ. ದ್ವಿಚಕ್ರ ಅಥವಾ ಕಾರಿನ ನಾಮಫಲಕದ ಮೇಲೆ ನೋಂದಣಿ ಸಂಖ್ಯೆ ಜತೆ ಲೇಸರ್‌ ಕೋಡ್‌ ಇರಲಿದೆ. ಇದರಲ್ಲಿ ಎಂಜಿನ್‌ ಸಂಖ್ಯೆ, ಚಾರ್ಸಿ ಸಂಖ್ಯೆ ಸೇರಿ ಹಲವು ಮಾಹಿತಿಗಳು ಕೇಂದ್ರೀಯ ಡೇಟಾದಲ್ಲಿ ಅಡಕವಾಗಿರಲಿದೆ. ಈ ಮಾಹಿತಿ ಬಳಸಿಕೊಂಡು ವಾಹನ ಕಳ್ಳತನವಾದಾಗ ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಭಯೋತ್ಪಾದಕ ಸೇರಿ ಇನ್ನಿತರ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳವುದನ್ನು ತಡೆಗಟ್ಟಬಹುದಾಗಿದೆ.

ರಾಜ್ಯದಲ್ಲಿ 2019 ರ ಏ.1ಕ್ಕೂ ಮುಂಚೆ ನೋಂದಣಿಯಾದ ವಾಹನಗಳಿಗೆ ಕಡ್ಡಾಯವಾಗಿ ಎಚ್‌ಎಸ್‌ಆರ್‌ಪಿ ನೋಂದಣಿ ಮಾಡಿಕೊಂಡು ನೂತನ ಸಂಖ್ಯಾ ಫಲಕ ಅಳವಡಿಸಿಕೊಳ್ಳುವಂತೆ ನಮ್ಮ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಇದರಿಂದ ನೋಂದಣಿ ಫಲಕಗಳಲ್ಲಿ ಏಕರೂಪತೆ ಇರಲಿದೆ. ಟ್ಯಾಂಪರಿಂಗ್‌ ಮತ್ತು ನಂಬರ್‌ ಪ್ಲೇಟ್‌ ನಕಲು ಮಾಡುವುದನ್ನು ಎಚ್‌ಎಸ್‌ಆರ್‌ಪಿ ತಡೆಯಲಿದೆ. ಇತ್ತೀಚೆಗೆ ಸರಕಾರದಿಂದ ಸೆ.15 ರವರೆಗೆ ನೋಂದಣಿ ಮಾಡಿಸಲು ಗಡುವು ನೀಡಿದ್ದು, ಆನ್‌ಲೈನ್‌ ಮೂಲಕ ವಾಹನ ಮಾಲೀಕರು ನೋಂದಣಿ ಮಾಡಿಸಬಹುದಾಗಿದೆ ಎಂದು ರಾಯಚೂರು ಆರ್‌ಟಿಒ ವಿನಯಾ ಹೇಳಿದ್ದಾರೆ.
ಸೌಮ್ಯಶ್ರೀ ಮಾರ್ನಾಡ್
ಲೇಖಕರ ಬಗ್ಗೆ
ಸೌಮ್ಯಶ್ರೀ ಮಾರ್ನಾಡ್
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ನಾಗರಿಕರ ಸಮಸ್ಯೆಗಳು, ಬೆಂಗಳೂರು ಸ್ಥಳೀಯ ಆಡಳಿತದ ಕುಂದುಕೊರತೆಗಳ ವರದಿ, ವಿಶೇಷ ವ್ಯಕ್ತಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ರಂಗಭೂಮಿ ಹಾಗೂ ಯಕ್ಷಗಾನ ಇವರ ಇತರ ಆಸಕ್ತಿಕರ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ